Friday, 12 October 2012

ಗುರುರಾಯರ ನಂಬಿರೊ ಮಾರುತಿಯೆಂಬ


ಗುರುರಾಯರ ನಂಬಿರೊ ಮಾರುತಿಯೆಂಬ
ಗುರುರಾಯರ ನಂಬಿರೊ

ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ

ವನಧಿಯ ಮನೋವೇಗದಿ ಲಂಘಿಸಿ ಮಹಿ-
ತನುಜೆ ಶೋಕವ ತರಿದು
ವನವ ಬೇರೊಡನೆ ಕಿತ್ತೀಡಾಡಿ ಎದುರಾದ
ದನುಜರ ಸದೆದು ಲಂಕೆಯ ತನ ಸಖಗಿತ್ತ

ಕೌರವ ಬಕ ಹಿಡಿಂಬ ಕೀಚಕರೆಂಬ
ದುರುಳ ಸಂತತಿ ನೆಗ್ಗೊತ್ತಿ
ಘೋರಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ

ಜೀವೇಶರೊಂದೆಂಬುವ ದುರ್ವಾದಿಯ ಅ-
ಭಾವ ಶಾಸ್ತ್ರಗಳೋಡಿಸಿ
ಕೋವಿದರಿಗೆ ಸದ್ಭಾಷ್ಯವ ತೋರಿದ
ದೇವ ಪುರಂದರವಿಠಲ ಸೇವಕರಾದ

ಗುಣವಾಯಿತೆನ್ನ ಭವರೋಗ


ಗುಣವಾಯಿತೆನ್ನ ಭವರೋಗ
ಕೃಷ್ಣನೆಂಬ ವೈದ್ಯನು ದೊರಕಿದನು
ಗುಣವಾಗುವವರಿಗೆ ಎಣೆಯಿಲ್ಲ
ಗುಣವಂತರಾಗುವರು ಭವವೆಲ್ಲ

ಸಂತತ ಹರಿಭಕ್ತಿಯನುಪಾನ
ಸಂತತ ಗುರುಭಕ್ತಿ ಮರುಪಾನ
ಸಂತತ ಶ್ರವಣ ಕಠಿಣ ಪಥ್ಯ
ಸಂತತ ಕೀರ್ತನ ಉಷ್ಣೋದಕ

ಚಂದ್ರೋದಯ ಉಂಟು ಈತನಲಿ
ಚಿಂತಾಮಣಿಯುಂಟು ಈತನಲಿ
ಸಂಚಿಯೊಳಗೆ ತುಂಬ ಮಾತ್ರೆಗಳುಂಟು
ಚಿನ್ನಾಗಿ ಗುಣಮಾಡುವನೀತ

ಗುರುಸ್ಮರಣೆಯು ಶುಂಠಿ ಮೆಣಸು
ಹರಿದಿವ್ಯನಾಮವು ಸಾರನ್ನ
ಗುರುಪಾದಸೇವೆಯು ಸಿಹಿ ಸಾರು
ಹರಿಪಾದೋದಕವೇ ಘೃತವು

ಸಹಸ್ರನಾಮದಿ ತಾ ವಂದ್ಯ
ಸಕಲ ಸ್ವತಂತ್ರಕೆ ತಾ ಬಾಧ್ಯ
ಹರಿಸರ್ವೋತ್ತಮನೆಂಬ ವೈದ್ಯ
ಪುರಂದರವಿಠಲನೆ ನಿಜವೈದ್ಯ

ಗಿಳಿಯು ಪಂಜರದೊಳಿಲ್ಲ ಶ್ರೀರಾಮ ರಾಮ



ಗಿಳಿಯು ಪಂಜರದೊಳಿಲ್ಲ ಶ್ರೀರಾಮ ರಾಮ
ಬರಿದೆ ಪಂಜರವಾಯಿತಲ್ಲ

ಅಕ್ಕ ಕೇಳೆ ಎನ್ನ ಮಾತು

ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯ್ಯೊ

ಅರ್ಥಿಲೊಂದು ಗಿಳಿಯ ಸಾಕಿ
ಮುತ್ತಿನ್ಹಾರವನ್ನು ಹಾಕಿದೆ
ಮುತ್ತಿನ್ಹಾರ ಕೊಂಡು ಗಿಳಿಯು
ಎತ್ತಲ್ಹಾರಿ ಹೋಯಿತಯ್ಯೊ

ಹಸುರು ಬಣ್ನದ ಗಿಳಿಯು
ಕುಶಲ ಬುದ್ದಿಯ್ ಗಿಳಿಯು
ಅಸುವು ಗುಂದಿ ಮರಿಯು ತಾನು
ಹಸನಗೆಡಿಸಿ ಹೋಯಿತಯ್ಯೊ

ರಾಮ ರಾಮ ಎಂಬ ಗಿಳಿ
ಕೋಮಲ ಕಾಯದ ಗಿಳಿ
ಸಾಮಜ ಪೋಷಕ ತನ್ನ
ಪ್ರೇಮದಿ ಸಾಕಿದ ಗಿಳಿ

ಒಂಬತ್ತು ಬಾಗಿಲ ಮನೆಯೋಳ್
ತುಂಬಿದ ಸಂದಣಿ ಇರಲು
ಕಂಭ ಮುರಿದು ಡಿಂಬ ಬಿದ್ದು
ಅಂಬರಕ್ಕೆ ಹಾರಿ ಹೋಯಿತು

ಮುಪ್ಪಾಗದ ಬೆಣ್ಣೆ ತಿಂದು
ತಪ್ಪದೆ ಹಾಕಿದ ಹಾಲ
ಒಪ್ಪದಿಂದ ಕುಡಿದು ಕೈ-
ತಪ್ಪಿ ಹಾರಿಹೋಯಿತಯ್ಯೋ

ಅಂಗೈಲಾಡುವ ಗಿಳಿ
ಮುಂಗೈ ಮೇಲಣ ಗಿಳಿ
ರಂಗ ಪುರಂದರವಿಠಲನ್ನ
ಅಂಗಣದೊಳಾಡುವ ಗಿಳಿ

ಗಜವದನ ಬೇಡುವೆ ಗೌರೀತನಯ


ಗಜವದನ ಬೇಡುವೆ ಗೌರೀತನಯ
ತ್ರಿಜಗ ವಂದಿತನೆ ಸುಜನರ ಪೊರೆವನೆ

ಪಾಶಾಂಕುಶಧರ ಪರಮಪವಿತ್ರ
ಮೂಷಕವಾಹನ ಮುನಿಜನ ಪ್ರೇಮ

ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ

ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ದಯಮಾಡೋ

ತೂಗಿರೆ ರಂಗನ ತೂಗಿರೆ ಕೃಷ್ಣನ


ತೂಗಿರೆ ರಂಗನ ತೂಗಿರೆ ಕೃಷ್ಣನ
ತೂಗಿರೆ ಅಚ್ಯುತಾನಂತನ

ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ
ತೂಗಿರೆ ಕಾವೇರಿ ರಂಗಯ್ಯನ

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ
ನಾಗಕನ್ನಿಕೆಯರು ತೂಗಿರೆ
ನಾಗವೇಣಿಯರು ನೇಣ ಪಿಡಿದುಕೊಂಡು
ಬೇಗನೆ ತೊಟ್ಟಿಲ ತೂಗಿರೆ

ಇಂದ್ರಲೋಕದಲ್ಲುಪೇಂದ್ರ ಮಲಗ್ಯಾನೆ
ಇಂದುಮುಖಿಯರೆಲ್ಲ ತೂಗಿರೆ
ಇಂದ್ರಕನ್ನಿಕೆಯರು ಚಂದದಿ ಬಂದು ಮು-
ಕುಂದನ ತೊಟ್ಟಿಲ ತೂಗಿರೆ

ಆಲದೆಲೆಯ ಮೇಲೆ ಶ್ರೀಲೋಲ ಮಲಗ್ಯಾನೆ
ನೀಲಕುಂತಳೆಯರು ತೂಗಿರೆ
ವ್ಯಾಳಶಯನ ಹರಿ ಮಲಗು ಮಲಗುಯೆಂದು
ಬಾಲಕೃಷ್ಣನ ತೂಗಿರೆ

ಸಾಸಿರನಾಮನೆ ಸರ್ವೋತ್ತಮನೆಂದು
ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮಡುವಿನೊಳ್ ಶೇಷನ ತುಳಿದಿಟ್ಟ
ದೋಷವಿದೂರನ ತೂಗಿರೆ

ಅರಳೆಲೆ ಮಾಗಾಯಿ ಕೊರಳ ಮುತ್ತಿನಹಾರ
ತರಳನ ತೊಟ್ಟುಲ ತೂಗಿರೆ
ಸಿರಿದೇವಿ ರಮಣನ ಪುರಂದವಿಠಲನೆ

ದುರಿತಗಜ ಪಂಚಾನನ


ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯಬೇಕೆನ್ನ

ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸಡುವರೆ ಗೋವಿಂದ

ಅರಸು ಮುಟ್ಟಲು ದಾಸಿ ರಂಭೆಯು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ

ಹೆಸರುಳ್ಲ ನದಿಗಳನೊಳಗೊಂಬ ಜಲಧಿಯು
ಬಿಸುಡುವನೆ ಕಾಲುಹೊಳೆಗಳನು ಗೋವಿಂದ

ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಮರೆಹೋಗಲೇಕೆ ಗೋವಿಂದ

ಸ್ಮರಣೆಮಾತ್ರಕಜಾಮಿಳಗೆ ಮುಕ್ತಿಯನಿತ್ತೆ
ವರದ ಪುರಂದರವಿಠಲ ಗೋವಿಂದ

ದೇವಕಿ ಕಂದ ಮುಕುಂದ


ದೇವಕಿ ಕಂದ ಮುಕುಂದ

ನಿಗಮೋದ್ಧಾರ ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ

ಶಂಖ ಚಕ್ರಧರ ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ

ಮಕರಕುಂಡಲಧರ ಮೋಹನವೇಷ
ರುಕುಮಿಣಿ ವಲ್ಲಭ ಪಾಂಡವ ಪೋಷ

ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ

ವರ ವೇಲಾಪುರ ಚೆನ್ನ ಪ್ರಸನ್ನ
ಪುರಂದರವಿಠಲ ಸಕಲ ಗುಣಪೂರ್ಣ